ಎನ್ಡಿಎ ಚುನಾವಣಾ ಪ್ರಚಾರ : ಇಂದು ಕೇರಳದಲ್ಲಿ ಮೋದಿ ರೋಡ್ ಶೋ !
ತಿರುವನಂತಪುರಂ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎನ್ಡಿಎ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಕೇರಳಕ್ಕೆ ಆಗಮಿಸಲಿದ್ದಾರೆ. ಪ್ರಧಾನಿಯವರು ತಿರುವಲ್ಲಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಬಳಿಕ ತಿರುವನಂತಪುರಂನಲ್ಲಿ ರೋಡ್ ಶೋ ಒಂದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೋದಿ ಅವರು ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದು ಚೆಂಗನ್ಚೇರಿ ಎನ್ಎಸ್ಎಸ್ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ. 3 ಗಂಟೆಗೆ ಅವರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.ಅಲ್ಲಿಂದ ಅವರು ರಸ್ತೆ ಮೂಲಕ ಸಾಗಿ ತಿರುವಲ್ಲಾ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ಮುಖಂಡರು ಮತ್ತು ಎನ್ಡಿಎ ಅಭ್ಯರ್ಥಿಗಳು ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಾರ್ವಜನಿಕ ಸಭೆಯ ಬಳಿಕ ಪ್ರಧಾನಿ ಮೋದಿಯವರು ಸಂಜೆ ತಿರುವನಂತಪುರಂಗೆ ಪ್ರಯಾಣಿಸಿ ಕಿಲ್ಲಿಪಾಲಂನಿಂದ ಕರಮಣ ಜಂಕ್ಷನ್ವರೆಗೆ ರೋಡ್ ಶೋ ನಡೆಸಲಿದ್ದಾರೆ. ಶೋ 1.5ಕಿ.ಮೀ. ದೂರ ನಡೆಯಲಿದೆ ಎಂದು ಅವರು ವಿವರಿಸಿವೆ. ರೋಡ್ ಶೋಗೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಆಗಮಿಸುವ ಸಾಧ್ಯತೆ ಇದೆ. ರಾಜೀವ್ ಚಂದ್ರಶೇಖರ್ ಮತ್ತು ವಿ.ಮುರಳೀಧರನ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮೋದಿ ಅವರು ಜಿಲ್ಲೆಯ ಎನ್ಡಿಎ ಅಭ್ಯರ್ಥಿಗಳನ್ನು ಭೇಟಿಯಾಗುವ ನಿರೀಕ್ಷೆ ಇದ್ದು ಸಂಜೆ 7 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ಕೇರಳದಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ.
ಇತರೆ ಸುದ್ದಿಗಳು