ಅಯೋಧ್ಯೆಯಿಂದ ಹೊರಟಿದೆ 'ಶ್ರೀರಾಮ ಜ್ಯೋತಿ'
ದಕ್ಷಿಣ ಕನ್ನಡ : ಅಯೋಧ್ಯೆಯ ರಾಮ ಜ್ಯೋತಿ ಅಂಜನಾದ್ರಿ ಬೆಟ್ಟ ಸ್ಪರ್ಶಿಸಿ ದಕ್ಷಿಣ ಕನ್ನಡದ ಪುತ್ತೂರು ಹನುಮಗಿರಿ ಕ್ಷೇತ್ರಕ್ಕೆ ರಥಯಾತ್ರೆ ಮೂಲಕ ಆಗಮಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮಹಿಮೆ ಸೇರಿಸಲಿದೆ. ಕರುನಾಡಿನ ರಾಮ ಭಕ್ತರಿಗೆ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇಲ್ಲಿದೆ ರೋಮಾಂಚನಕಾರಿ ಸುದ್ದಿ! ಸಾಕ್ಷಾತ್ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪೂಜೆಗೊಂಡ ಪವಿತ್ರ 'ರಾಮ ಜ್ಯೋತಿ' ಹಾಗೂ ರಥಯಾತ್ರೆ ಈಗ ನೇರವಾಗಿ ಕರಾವಳಿಯ ಪುತ್ತೂರಿನತ್ತ ಹೆಜ್ಜೆ ಹಾಕಿದೆ. ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏಪ್ರಿಲ್ 9 ರಿಂದ 12 ರವರೆಗೆ ನಡೆಯಲಿರುವ ಅದ್ದೂರಿ 'ಅಷ್ಟಬಂಧ ಬ್ರಹ್ಮಕಲಶೋತ್ಸವ'ದ ಅಂಗವಾಗಿ ಈ ಬೃಹತ್ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಅಯೋಧ್ಯೆಯಿಂದ ಹೊರಟಿರುವ ಈ ಪವಿತ್ರ ರಾಮ ಜ್ಯೋತಿಯು ನೇರವಾಗಿ ಪುತ್ತೂರಿಗೆ ಬರುವ ಮುನ್ನ, ಆಂಜನೇಯನ ಜನ್ಮಸ್ಥಳವೆಂದೇ ನಂಬಲಾದ ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿದೆ. ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ, ಪೂಜೆ ಸಲ್ಲಿಸಿದ ಬಳಿಕವಷ್ಟೇ ರಥಯಾತ್ರೆಯು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದೆ. ಅಷ್ಟೇ ಅಲ್ಲ, ರಾಮ ದೀಕ್ಷೆ ಪಡೆದ ಭಕ್ತರಿಗೆ ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಪುಣ್ಯ ಮೃತ್ತಿಕೆ ಹಾಗೂ ಗಂಗಾಜಲವನ್ನು ಸಾಕ್ಷಾತ್ ಪ್ರಸಾದದ ರೂಪದಲ್ಲಿ ವಿತರಿಸಲಾಗುವುದು ಎಂದು ದೇಗುಲದ ಸಮಿತಿ ತಿಳಿಸಿದೆ.
ಇತರೆ ಸುದ್ದಿಗಳು