ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!
ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಧ್ವಜವನ್ನು ನೀಡಿ ಜಾಹ್ನವಿ ಅವರನ್ನು ಸ್ವಾಗತಿಸಿದರು. ಜಾಹ್ನವಿ ಅವರು ಜೆಡಿಎಸ್ ಪಕ್ಷವನ್ನು ಸೇರುವ ಮೂಲಕ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಿವಿ ಶೋ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಜಾಹ್ನವಿ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ನಂತರ ಬಡವರಿಗೆ ಸಹಾಯ ಮಾಡುವಂತಹ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜಾಹ್ನವಿ, ಇದೀಗ ತಮ್ಮ ಜೀವನದ ಹೊಸ ಕಾರ್ಯ ಆರಂಭಿಸಿದ್ದಾರೆ. ಜೆಡಿಎಸ್ ಮಹಿಳಾ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸದ್ಯಕ್ಕೆ ಯಾವುದೇ ಪದಾಧಿಕಾರಿ ಹುದ್ದೆ, ಸಂಘಟನಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಪಕ್ಷದ ಮೂಲಕಗಳು ತಿಳಿಸಿವೆ. ಬಿಗ್ಬಾಸ್ನಲ್ಲಿ ಭಾಗಹಿಸಿರುವಂತಹವರು, ಕನ್ನಡ ಸಿನಿಮಾದಲ್ಲಿ ನಟಿಸಿದ, ಟಿವಿ ಮಾಧ್ಯಮದ ನಿರೂಪಕಿ ಜಾಹ್ನವಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಒಂದು ಉತ್ತರ ಹೆಸರು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ನಗರ ಘಟಕದ ಅಧ್ಯಕ್ಷರು ಸ್ವಾಗತಿಸುತ್ತಿದ್ದಾರೆ ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದರು. ಬಳಿಕ ಜಾಹ್ನವಿ ಕಾಲಿಗೆ ಬಿದ್ದು ಸಚಿವರ ಆಶೀರ್ವಾದ ಪಡೆದುಕೊಂಡರು. ಜಾಹ್ನವಿ ಅವರು ಮೂಲತಃ ಸುದ್ದಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನನ್ನಮ್ಮ ಸೂಪರ್ ಸ್ಟಾರ್, ಮತ್ತು ಗಿಚ್ಚಿ ಗಿಲಿಗಿಲಿ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುವ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾದರು. ಇತ್ತೀಚೆಗೆ ಅಧಿಪತ್ರ ಎಂಬ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿ, ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.